`ಯಕ್ಷಗಾನದ ಮೂಲ ಸ್ವರೂಪಕ್ಕೆ ಧಕ್ಕೆ ಸಲ್ಲದು` - ಡಾ| ಡಿ. ವೀರೇಂದ್ರ ಹೆಗ್ಗಡೆ
ಲೇಖಕರು : ಉದಯವಾಣಿ
ಭಾನುವಾರ, ಜುಲೈ 7 , 2013
|
ಮಂಗಳೂರು: ಕಲೆಯೆಂಬುದು ನಿಂತ ನೀರಲ್ಲ. ವಿವಿಧ ಕಲಾ ಪ್ರಾಕಾರಗಳಲ್ಲಿ ಬದಲಾವಣೆಗಳು ನಡೆಯುತ್ತಲೇ ಇರುತ್ತವೆ. ಪ್ರತಿಭಾನ್ವಿತ ಕಲಾವಿದರ ಮುಖಾಂತರ ಯಕ್ಷಗಾನದಲ್ಲಿಯೂ ಅಂತಹ ಪರಿವರ್ತನೆಗಳು ನಡೆದಿವೆ. ಆದರೆ ಪರಿವರ್ತನಾ ದಿಕ್ಕಿನಲ್ಲಿ ಸಾಗುವಾಗ ಯಕ್ಷರಂಗದ ಪಾರಂಪರಿಕ, ಸಾಂಪ್ರದಾಯಿಕ ಮತ್ತು ಮೂಲ ಸ್ವರೂಪಗಳನ್ನು ಉಳಿಸಿಕೊಳ್ಳಬೇಕು ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ಅಭಿಪ್ರಾಯಪಟ್ಟರು.
ರಘುರಾಮಾಭಿನಂದನಮ್ ಸಮ್ಮಾನ ಸಮಿತಿ ವತಿಯಿಂದ ನಗರದ ಪುರಭವನದಲ್ಲಿ ನಡೆಯುತ್ತಿರುವ ಭಾಗವತ ಪುತ್ತಿಗೆ ರಘುರಾಮ ಹೊಳ್ಳ ಅವರನ್ನು ಗೌರವಿಸುವ 'ರಘುರಾಮಾಭಿನಂದನಮ್' ಕಾರ್ಯಕ್ರಮದಲ್ಲಿ ರಘುರಾಮ ಹೊಳ್ಳರನ್ನು ಸಮ್ಮಾನಿಸಿ, ಅವರು ಶನಿವಾರ ಅಧ್ಯಕ್ಷೀಯ ಭಾಷಣ ಮಾಡಿದರು.
|
''ರಘುರಾಮಾಭಿನಂದನಮ್'' ಕಾರ್ಯಕ್ರಮದಲ್ಲಿ ರಘುರಾಮ ಹೊಳ್ಳರನ್ನು ಸಮ್ಮಾನಿಸಲಾಯಿತು.
|
ಪುತ್ತಿಗೆ ರಘುರಾಮ ಹೊಳ್ಳ ಅವರು ಭಾಗವತಿಕೆಯಲ್ಲಿ ತಾಳ, ಲಯ ಮತ್ತು ಬದ್ಧತೆಯನ್ನು ಉಳಿಸಿಕೊಳ್ಳುವುದರ ಜೊತೆಗೆ ಈ ಕ್ಷೇತ್ರದಲ್ಲಿ ಪರಿವರ್ತನೆಯನ್ನು ತರುವಲ್ಲಿ ಯಶಸ್ವಿಯಾಗಿರುವ ಮೇರು ಕಲಾವಿದ. ಪಾರಂಪರಿಕ ಸತ್ವಗಳನ್ನು ಉಳಿಸಿಕೊಂಡು 60-70ರ ನಂತರದ ದಶಕದಲ್ಲಿ ಯಕ್ಷಗಾನ ಕ್ಷೇತ್ರದಲ್ಲಿ ಬದಲಾವಣೆಗಳು ನಡೆದಿವೆ. ಕಲಾವಿದರ ಕಲಾಭಿಮಾನ ಮತ್ತು ಉತ್ಸಾಹದಿಂದ ಇದು ಸಾಧ್ಯವಾಯಿತು ಎಂದು ಅವರು ಹೇಳಿದರು.
ಪುತ್ತಿಗೆ ರಘುರಾಮ ಹೊಳ್ಳ ಹಾಗೂ ವಾಣಿ ಹೊಳ್ಳ ದಂಪತಿಯನ್ನು ಸಮ್ಮಾನಿಸಲಾಯಿತು. ಸಮ್ಮಾನವು 'ಭಾಗವತ ಹಂಸ' ಎಂಬ ಬಿರುದಿನೊಂದಿಗೆ 5,55,555 ರೂ. ನಗದು, ಚಿನ್ನ ಮತ್ತು ಬೆಳ್ಳಿಯ ಜಾಗಟೆಗಳನ್ನೊಳಗೊಂಡಿತ್ತು.
ಅರಣ್ಯ ಹಾಗೂ ಜೀವಶಾಸ್ತ್ರ ಖಾತೆಯ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ, ಶ್ರೀ ಧಮಸ್ಥಳ ಮೇಳದ ಸಂಚಾಲಕ ಡಿ. ಹರ್ಷೇ೦ದ್ರಕುಮಾರ್, ಮಂಗಳೂರು ವಿವಿಯ ಡಾ| ಪಿ. ದಯಾನಂದ ಪೈ ಮತ್ತು ಸತೀಶ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ನಿರ್ದೇಶಕ ಡಾ| ಚಿನ್ನಪ್ಪ ಗೌಡ ಮುಖ್ಯ ಅತಿಥಿಗಳಾಗಿದ್ದರು. ಹರ್ಯಾಣ ಗುರಗಾಂವ್ ಅಮೆರಿಕನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯನ್ ಸ್ಟಡೀಸ್ನ ನಿರ್ದೇಶಕ ಡಾ| ಪುರುಷೋತ್ತಮ ಬಿಳಿಮಲೆ ಅಭಿನಂದನಾ ಭಾಷಣಗೈದರು. ಸಮಿತಿ ಅಧ್ಯಕ್ಷ ಹರಿಕೃಷ್ಣ ಪುನರೂರು, ದ.ಕ. ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪಕುಮಾರ ಕಲ್ಕೂರ ಮತ್ತಿತರರು ಉಪಸ್ಥಿತರಿದ್ದರು. ಹಷೇìಂದ್ರಕುಮಾರ್ ಅವರಿಗೆ ಹೊಳ್ಳರಿಂದ ಗೌರವಾರ್ಪಣೆ ನಡೆಯಿತು.
ಹಿರಣ್ಯ ವೆಂಕಟೇಶ್ ಭಟ್ ಸಮ್ಮಾನ ಪತ್ರ ವಾಚಿಸಿದರು. ಕಟೀಲು ಶ್ರೀ ಕ್ಷೇತ್ರದ ಅರ್ಚಕ ಹರಿನಾರಾಯಣದಾಸ ಆಸ್ರಣ್ಣ ಸ್ವಾಗತಿಸಿದರು. ವಾಸುದೇವ ರಂಗಾಭಟ್ಟ ವಂದಿಸಿದರು. ಸರವು ಕೃಷ್ಣ ಭಟ್ಟ ನಿರೂಪಿಸಿದರು.
ಸಾಂಸ್ಕೃತಿಕ ನೀತಿ ಘೋಷಣೆ
ಶುಭಾಶಂಸನೆಗೈದ ವಿದ್ವಾಂಸ ಡಾ| ಎಂ. ಪ್ರಭಾಕರ ಜೋಶಿ ಅವರು, ದೇಶೀಯ ಸಾಂಸ್ಕೃತಿಕ ಸಂಪತ್ತನ್ನು ಎತ್ತಿ ಹಿಡಿಯುವ ಕಲೆಗಳನ್ನು ಉಳಿಸಿ ಬೆಳೆಸುವ ಸಲುವಾಗಿ ನೂತನ ಸರಕಾರವು ಸಾಂಸ್ಕೃತಿಕ ನೀತಿಯೊಂದನ್ನು ಘೋಷಣೆ ಮಾಡಬೇಕು ಎಂದರು.
"ಯಕ್ಷಗಾನದಲ್ಲಿ ಯುವ ತಲೆಮಾರಿನವರ ಸಂಖ್ಯೆ ಗಣನೀಯ ಇಳಿಕೆಯಾಗುತ್ತಿದೆ. ಈ ನಿಟ್ಟಿನಲ್ಲಿ ಯಕ್ಷಗಾನದ ಭವಿಷ್ಯದ ಬಗ್ಗೆ ಚಿಂತಿಸುವ ಮತ್ತು ಚರ್ಚಿಸುವ ಸಲುವಾಗಿ ಮುಂದಿನ ತಿಂಗಳು ಹರ್ಷೇ೦ದ್ರ ಕುಮಾರ್ ಅವರ ನೇತೃತ್ವದಲ್ಲಿ ಧರ್ಮಸ್ಥಳದಲ್ಲಿ ಸಭೆ ಕರೆಯಲಾಗುವುದು." - ಡಾ| ಡಿ. ವೀರೇಂದ್ರ ಹೆಗ್ಗಡೆ
ಕೃಪೆ : http://www.udayavani.com
|
|
|